ಮುಳಬಾಗಲು 
ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಆಡಳಿತ ಕೇಂದ್ರ. ವಾಯುವ್ಯ ಮತ್ತು ಪಶ್ಚಿಮದಲ್ಲಿ ಶ್ರೀನಿವಾಸಪುರ, ದಕ್ಷಿಣದಲ್ಲಿ ಬಂಗಾರಪೇಟೆ, ಪಶ್ಚಿಮಕ್ಕೆ ಕೋಲಾರ ತಾಲ್ಲೂಕುಗಳೂ ಉತ್ತರ ಮತ್ತು ಪೂರ್ವದಲ್ಲಿ ಆಂಧ್ರ ಪ್ರದೇಶವೂ ಸುತ್ತುವರಿದಿವೆ. ಒಂದು ಪಟ್ಟಣ ಮತ್ತು 344 ಗ್ರಾಮಗಳು ಇವೆ. ದುಗ್ಗಸಂದ್ರ, ಮುಳಬಾಗಲು, ಬೈರಕೂರು, ತಾಯಲೂರು ಮತ್ತು ಅವನಿ ಹೋಬಳಿಗಳು. ತಾಲ್ಲೂಕಿನ ವಿಸ್ತೀರ್ಣ 836.4 ಚ.ಕಿ.ಮೀ. ಜನಸಂಖ್ಯೆ 2,31,065 (2001). ವಾರ್ಷಿಕ ಸರಾಸರಿ ಮಳೆ 755.19 ಮಿ.ಮೀ.

	ಬೆಟ್ಟಗುಡ್ಡಗಳಿಂದ ಕೂಡಿದೆ. ಮುಳಬಾಗಲು ಮತ್ತು ಅವನಿ ಬಳಿಯ ಬೆಟ್ಟಗಳು ದೊಡ್ಡವು. ಮುಖ್ಯ ಬೆಟ್ಟಶ್ರೇಣಿಯೊಂದು ಮಧ್ಯದಲ್ಲಿ ಹಬ್ಬಿದ್ದು ಇದರ ಪಶ್ಚಿಮ ಪ್ರದೇಶದಲ್ಲಿ ವಿಶಾಲ ಕಣಿವೆಗಳಿದ್ದರೆ ಪೂರ್ವದಲ್ಲಿ ಕಿರುಕಣಿವೆಗಳಿವೆ. ಪಿಂಗಾಣಿ ಸಾಮಾನು ತಯಾರಿಕೆಗೆ ಉಪಯುಕ್ತವಾಗುವ ಬಿಳಿ ಜೇಡಿ ಮತ್ತು ಕೆಂಪುಜೇಡಿ ಮಣ್ಣುಂಟು. ವ್ಯವಸಾಯಕ್ಕೆ ಪೂರಕವಾಗುವಂಥ ಹಲವಾರು ಕೆರೆಗಳೂ ಬಾವಿಗಳೂ ಇವೆ. ರಾಗಿ, ಬತ್ತ, ನೆಲಗಡಲೆ ಮುಖ್ಯ ಬೆಳೆಗಳು, ದ್ವಿದಳ ಧಾನ್ಯಗಳನ್ನೂ ಹಣ್ಣುಗಳನ್ನೂ ಬೆಳೆಸುತ್ತಾರೆ. ಪಶುಪಾಲನೆ ಉಂಟು.

	ಇಲ್ಲಿ ಉಕ್ಕಿನ ಪೀಠೋಪಕರಣ ಮತ್ತು ಕೈಮಗ್ಗದ ಬಟ್ಟೆ ತಯಾರಿಸುತ್ತಾರೆ. ಕೈಗಾರಿಕಾ ಸಹಕಾರ ಸಂಘಗಳು ನಿಯಂತ್ರಿತ ಮಾರುಕಟ್ಟೆ ಮತ್ತು ವಾಣಿಜ್ಯ ಬ್ಯಾಂಕುಗಳಿವೆ. ಅಂಚೆ, ತಂತಿ, ವಿದ್ಯುತ್ ಸೌಲಭ್ಯಗಳು, ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗ್ರಾಮಮಟ್ಟದ ಔಷಧಾಲಯಗಳು ಹಾಗೂ ಕೆಲವು ಆಯುರ್ವೇದ ಮತ್ತು ಯುನಾನಿ ಔಷಧಾಲಯಗಳು ಇವೆ.

	ಅವನಿಯಲ್ಲಿ ಅನೇಕ ದೇವಾಲಯಗಳಿವೆ. ಇದನ್ನು ದಕ್ಷಿಣ ಗಯ ಎಂದು ಕರೆಯುವರು. ಮುಳಬಾಗಲದ ವಾಯುವ್ಯದಲ್ಲಿರುವ ಕುರುಡುಮಲೆಯಲ್ಲಿ ಪ್ರಾಚೀನ ದೇವಾಲಯಗಳ ಅವಶೇಷಗಳಿವೆ. ಪೂರ್ವಗಡಿಯಂಚಿನ ಗ್ರಾಮ ನಂಗಲಿ. ವಿಷ್ಣುವರ್ಧನ ಜಯಿಸಿದವುಗಳಲ್ಲಿ ಇದು ಒಂದು ಎಂಬುದಾಗಿ ಶಾಸನಗಳಲ್ಲಿ ಹೇಳಿದೆ.

	ಈ ತಾಲ್ಲೂಕು ಮೊದಲು ಬಾಣರ ಆಡಳಿತಕ್ಕೆ ಸೇರಿತ್ತು. 10ನೆಯ ಶತಮಾನದ ಕೊನೆಯಲ್ಲಿ ಪಲ್ಲವರ ಕೈಸೇರಿತು. ಉತ್ತರದಲ್ಲಿ ವೈಡುಂಬರರು ಆಳುತ್ತಿದ್ದರು. ಮುಂದೆ ಕೋಲಾರದ ಒಂದು ಭಾಗವಾಗಿ ವಿಜಯನಗರದ ಆಡಳಿತಕ್ಕೆ ಸೇರಿತು. ಲಕ್ಕಣ್ಣಡಣ್ಣಾಯಕ ಮತ್ತು ಮಾದನ್ನದಣ್ಣಾಯಕ ಎಂಬವರು ಇಲ್ಲಿ ಆಳುತ್ತಿದ್ದು ಮುಂದೆ ಹೊಸಕೋಟೆಯ ತಿಮ್ಮೇಗೌಡನ ಆಡಳಿತಕ್ಕೆ ಒಳಪಟ್ಟಿತು. 1768ರಲ್ಲಿ ಕರ್ನಲ್ ಕ್ಯಾಂಪ್‍ಬೆಲ್ ಇದನ್ನು ಇಂಗ್ಲೀಷರ ಆಡಳಿತಕ್ಕೆ ಸೇರಿಸಿದ.

	ಮುಳಬಾಗಲು ಹೋಬಳಿ ಮತ್ತು ತಾಲ್ಲೂಕು ಆಡಳಿತ ಕೇಂದ್ರ. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೋಲಾರದ ಪೂರ್ವಕ್ಕೆ 30 ಕಿ.ಮೀ ದೂರದಲ್ಲಿದೆ. ಜನಸಂಖ್ಯೆ 44,031 (2001). ಮುಳಬಾಗಲು ತಿರುಪತಿಗೆ ಹೋಗುವ ಮಾರ್ಗದಲ್ಲಿ ಕರ್ನಾಟಕ ರಾಜ್ಯದ ಪೂರ್ವಗಡಿಯಲ್ಲಿ ಮುಗ್ಲಿಬೆಟ್ಟಗಳ ಶ್ರೇಣಿಯಲ್ಲಿರುವುದರಿಂದ ಅದನ್ನು ಮೂಡ್ಲಬಾಗಿಲು ಎಂದು ಕರೆದು, ಮುಂದೆ ಅದೇ ಮುಳಬಾಗಲು ಆಗಿದೆಯೆನ್ನುವರು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಮುಳಬಾಗಲು ಈ ಪ್ರಾಂತ್ಯದ ಆಡಳಿತ ಕೇಂದ್ರವಾಗಿತ್ತು.

	ಪಟ್ಟಣದಲ್ಲಿ ಶಾಲೆಗಳು, ಸಾರ್ವಜನಿಕ ಆಸ್ಪತ್ರೆ, ವಿದ್ಯುತ್ ಮತ್ತು ಅಂಚೆ-ತಂತಿ ಸೌಲಭ್ಯಗಳಿವೆ. ನಗರಸಭಾಡಳಿತವಿದೆ. ಪಟ್ಟಣದ ಹತ್ತಿರ ಕೆಲವು ಪುರಾತನ ದೇವಾಲಯಗಳುಂಟು. ತಿರುಪತಿಗೆ ಹೋಗುವವರು ಇಲ್ಲಿಯ ನರಸಿಂಹತೀರ್ಥದಲ್ಲಿ ಮಿಂದು, ಮುಡಿಕೊಟ್ಟು ಹೋಗುವ ಪದ್ಧತಿ ಇದೆ. ಈ ಪಟ್ಟಣದ ಹತ್ತಿರ ಇರುವ ಬೆಟ್ಟದ ಮೇಲೆ ರಾಮತೀರ್ಥ ಮತ್ತು ಲಕ್ಷ್ಮಣತೀರ್ಥಗಳೆಂಬ ಎರಡು ಕೊಳಗಳಿವೆ. ಮುಳಬಾಗಿಲಿನಿಂದ 1.5 ಕಿ.ಮೀ. ದೂರದಲ್ಲಿ ಶ್ರೀಪಾದರಾಯರ ಬೃಂದಾವನವಿದೆ. ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಸೋಮೇಶ್ವರಸ್ವಾಮಿ ಜಾತ್ರೆ ನಡೆಯುತ್ತದೆ. ಇಲ್ಲಿರುವ ಆಂಜನೇಯಸ್ವಾಮಿ ದೇವಾಲಯ ಬಲು ಪ್ರಸಿದ್ಧ.
(ಕೆ.ಎ.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ